
ಬೆಂಗಳೂರು : ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಸಂಪುಟ ಸಭೆ ನಿನ್ನೆ(ನ.28) ನಡೆದಿದ್ದು, ಈ ವೇಳೆ ವಿವಿ ತಿದ್ದುಪಡಿ ವಿಧೇಯಕಕ್ಕೆ ಸಂಪುಟ ಒಪ್ಪಿಗೆ ಸೂಚಿಸಿದೆ. ರಾಜ್ಯಪಾಲರ ಅಧಿಕಾರ ಹಿಂಪಡೆದ ಕ್ಯಾಬಿನೆಟ್ ಸಿಎಂಗೆ ನೀಡಿದೆ.


ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿವಿ ತಿದ್ದುಪಡಿ ವಿಧೇಯಕಕ್ಕೆ ಸಚಿವ ಸಂಪುಟ ಸಭೆ ಅನುಮೋದಿಸಿದೆ. ಇಷ್ಟು ದಿನ ರಾಜ್ಯಪಾಲರು ಕುಲಪತಿ ಆಗಿದ್ದರು. ಆದರೆ, ಇನ್ನು ಮುಂದೆ ಮುಖ್ಯಮಂತ್ರಿ ಕುಲಪತಿಯಾಗಲಿದ್ದಾರೆ. ಆ ಮೂಲಕ ರಾಜ್ಯಪಾಲರ ಬಳಿ ಇದ್ದ ಅಧಿಕಾರವನ್ನು ಹಿಂಪಡೆದು ಸಿಎಂಗೆ ನೀಡಲಾಗಿದೆ.
ವಿಧಾನಸೌಧದಲ್ಲಿ ಸಂಪುಟ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಹೆಚ್.ಕೆ.ಪಾಟೀಲ್, ತಿದ್ದುಪಡಿ ವಿಧೇಯಕಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಕೊಳವೆಬಾವಿ ನಿಷ್ಕ್ರಿಯ ಆಗಿದ್ದರೆ ಮುಚ್ಚುವುದು ಕಡ್ಡಾಯ. ಶಿಕ್ಷೆ ಹಾಗೂ ದಂಡ ವಿಧಿಸಲು ವಿಧೇಯಕದಲ್ಲಿ ಅವಕಾಶವಿದೆ. ಅದೇ ರೀತಿಯಾಗಿ ಚಾಣಕ್ಯ ವಿವಿ ತಿದ್ದುಪಡಿ ವಿಧೇಯಕಕ್ಕೆ ಕ್ಯಾಬಿನೆಟ್ ಅನುಮೋದಿಸಿದ್ದು, ಸರ್ಕಾರಿ ಅಧಿಕಾರಿ ಉಸ್ತುವಾರಿ ನೇಮಕಕ್ಕೆ ವಿಧೇಯಕದಲ್ಲಿ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

