
ಮಂಗಳೂರು : ನಗರದ ಹೊರವಲಯದ ತುಂಬೆ ಗ್ರಾಮದ ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಖ್ಯಾತ ಕಳ್ಳರ ತಂಡವನ್ನು ಮಟ್ಟ ಹಾಕುವಲ್ಲಿ ಪೊಲೀಸರ ತಂಡ ಯಶಸ್ವಿಯಾಗಿದೆ. ದ.ಕ. ಜಿಲ್ಲಾ ಪೊಲೀಸರ ವಿಶೇಷ ತನಿಖಾ ತಂಡ ಕಾರ್ಯಾಚರಣೆ ನಡೆಸಿ ಇರಾದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿವೆ.


ಕಾಸರಗೋಡಿನ ಕೋತಂಕರ ನಿವಾಸಿ ಬಶೀರ್ ಕೆ ಪಿ. ಯಾನೆ ಆಕ್ತಿ ಬಶೀರ್ (44), ಕೊಲ್ಲಂ ಜಿಲ್ಲೆಯ ಆಲಪ್ಪಾಡ್ ನ ಪ್ರಕಾಶ್ ಬಾಬು ಯಾನೆ ಮಹಮ್ಮದ್ ನಿಯಾಜ್ (46) ಹಾಗೂ ಪುದು ಗ್ರಾಮ ನಿವಾಸಿ ಎಫ್.ಜೆ. ಮಹಮ್ಮದ್ ಇಸ್ಮಾಯಿಲ್ ಬಂಧಿತ ಆರೋಪಿಗಳು. ಇವರ ಪೈಕಿ ಬಶೀರ್ ಕೆ.ಪಿ. ಕುಖ್ಯಾತ ಕಳ್ಳನಾಗಿದ್ದು, ಈತನ ವಿರುದ್ದ ಬೇರೆ ಬೇರೆ ಠಾಣೆಗಳಲ್ಲಿ ಸುಮಾರು 13 ಕಳ್ಳತನ ಪ್ರಕರಣಗಳು ದಾಖಲಾಗಿರುತ್ತದೆ. ಆರೋಪಿ ಪ್ರಕಾಶ್ ಬಾಬು,ನಿಯಾಜ್,ಇಸ್ಮಾಯಿಲ್ ಯಾನೆ ಮಹಮ್ಮದ್ ನಿಯಾಝನ ವಿರುದ್ದ 3 ಕಳ್ಳತನ ಪ್ರಕರಣಗಳು ದಾಖಲಾಗಿವೆ. ಬಂಧಿತರಿಂದ 1.25 ಲಕ್ಷ ರೂ. ಮೌಲ್ಯದ ಬೆಳ್ಳಿಯ ಆಭರಣಗಳು ಹಾಗೂ ಕಾರನ್ನು ವಶಪಡಿಸಲಾಗಿದೆ. ಆರೋಪಿಗಳು ನ. 4ರಂದ ದೇವಸ್ಥಾನದ ಮುಂಬಾಗಿಲ ಮೂಲಕ ಒಳ ನುಗ್ಗಿ ಕಳ್ಳತನ ನಡೆಸಿ ಸಿಸಿ ಕೆಮರಾದ ಡಿವಿಆರ್ ಅನ್ನು ಕೂಡ ಹೊತ್ತೊಯ್ದಿದ್ದರು. ಅದಕ್ಕೆ ಮುನ್ನಾದಿನ ಫರಂಗಿಪೇಟೆ ಸುಜೀರಿನ ಶ್ರೀ ರವಳನಾಥ ಮಂದಿರದಲ್ಲೂ ಕಳ್ಳತನ ನಡೆದಿತ್ತು. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಇಲಾಖೆ ವಿಶೇಷ ತಂಡ ಕಾರ್ಯಾಚರಣೆಗೆ ಇಳಿದಿತ್ತು.