
ಬೆಂಗಳೂರು: ರಾಜ್ಯ ಬಿಜೆಪಿ ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆಗೆ ಸರ್ಕಸ್ ನಡೆಯುತ್ತಿರುವುದರ ಮಧ್ಯೆಯೇ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನದ ಜವಾಬ್ದಾರಿಯಿಂದ ತನ್ನನ್ನು ಬಿಡುಗಡೆಗೊಳಿಸುವಂತೆ ಮಾಜಿ ಸಚಿವ ವಿ. ಸುನಿಲ್ ಕುಮಾರ್ ಪಕ್ಷದ ಹಿರಿಯರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.


ಈ ಬಗ್ಗೆ ಕೆಲವು ದಿನಗಳ ಹಿಂದೆಯೇ ಅವರು ಪಕ್ಷದ ಪ್ರಮುಖರು ಹಾಗೂ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಲ್ಲಿ ಮೌಖಿಕವಾಗಿ ಕೋರಿಕೊಂಡಿದ್ದರು ಎನ್ನಲಾಗುತ್ತಿದೆ.
ಸುನಿಲ್ ಅವರ ಈ ವಿಮುಖತೆಗೆ ಬಣ ರಾಜಕಾರಣ ಕಾರಣವಲ್ಲ, ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ಸಂಘಟನಾತ್ಮಕವಾಗಿ ತೊಡಗಿಕೊಳ್ಳುವುದು ಕಷ್ಟವಾಗುತ್ತಿರುವುದರಿಂದ ಈ ನಿರ್ಣಯಕ್ಕೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.


ಬಿಜೆಪಿಯಲ್ಲಿ ಪ್ರಧಾನ ಕಾರ್ಯದರ್ಶಿ ಹುದ್ದೆ ಆಯಕಟ್ಟಿನದು. ಸಾಮಾನ್ಯವಾಗಿ ನಾಲ್ವರು ಪ್ರಮುಖರನ್ನು ಮಾತ್ರ ಈ ಹುದ್ದೆಗೆ ನಿಯೋಜನೆ ಮಾಡಲಾಗುತ್ತದೆ. ಸುನಿಲ್ ಕುಮಾರ್, ನಂದೀಶ್ ರೆಡ್ಡಿ, ಪ್ರೀತಮ್ ಗೌಡ ಹಾಗೂ ಪಿ. ರಾಜೀವ್ ಸದ್ಯ ಈ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.

ಸಂಘಟನಾತ್ಮಕ ಹಿನ್ನೆಲೆಯಿಂದ ಬಂದ ಸುನಿಲ್ ಹಾಗೂ ವಿಜಯೇಂದ್ರ ನಡುವೆ “ವಿರಸವೂ ಅಲ್ಲದ, ಸಮರಸವೂ ಅಲ್ಲದ’ ತಟಸ್ಥ ಸಂಬಂಧವಿದೆ. ಆದಾಗಿಯೂ ಜವಾಬ್ದಾರಿಯಿಂದ ಮುಕ್ತಗೊಳಿಸುವಂತೆ ಮನವಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ಕೋರಿಕೆಯನ್ನು ಪಕ್ಷ ಪರಿಗಣಿಸಿದೆಯೋ ಇಲ್ಲವೋ? ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.