
ಕಟಪಾಡಿ: ಅಯೋಧ್ಯೆ ಬಾಲ ರಾಮನ ಮೂರ್ತಿಯ ಸೃಷ್ಟಿಕರ್ತ ಶಿಲ್ಪಿ ಅರುಣ್ ಯೋಗಿರಾಜ್ಗೆ ಹೊಯ್ಸಳ ಮಹಾಶಿಲ್ಪಿ ಮಲ್ಲಿತಮ್ಮ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉಡುಪಿ ಜಿಲ್ಲೆ ಕಟಪಾಡಿಯ ಶ್ರೀಮತ್ ಜಗದ್ಗುರು ಅನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಈ ಗೌರವ ನೀಡಿ ಗೌರವಿಸಿದೆ. ಜಗದ್ಗುರು ಅನಂತ ಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳ ಪಟ್ಟಾಭಿಷೇಕ ಮಹೋತ್ಸವದ 14ನೇ ವರ್ಷದ ವರ್ಧಂತ್ಯುತ್ಸವ ಪ್ರಯುಕ್ತ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.



ಈ ಸಂದರ್ಭದಲ್ಲಿ ವಿವಿಧ ಶಿಲ್ಪಕಲೆಗಳ ರಾಷ್ಟ್ರೀಯ ವಿಚಾರಸಂಕಿರಣ ನಡೆಯುತ್ತಿದ್ದು, ಮೈಸೂರಿನ ಕಲಾವಿದ ಅರುಣ್ ಯೋಗಿರಾಜ್ ಅವರನ್ನು ಮುಖ್ಯ ಅತಿಥಿಯಾಗಿ ಆಯ್ಕೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಸ್ವಾಮೀಜಿ, ವಿಶ್ವಕರ್ಮ ಸಮುದಾಯದ ವಿದ್ವಾಂಸರು, ಮುಖಂಡರ ಸಮ್ಮುಖದಲ್ಲಿ ಹೊಯ್ಸಳರ ಕಾಲದ ಮಹಾಶಿಲ್ಪಿ ಮಲ್ಲಿತಮ್ಮ ಹೆಸರಿನ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯ್ತು. ಈ ಸಂದರ್ಭ ಮಾತನಾಡಿದ ಅರುಣ್ ಯೋಗಿರಾಜ್, ಅಯೋಧ್ಯ ಬಾಲರಾಮನ ಮೂರ್ತಿ ಕೆತ್ತನೆ ನಂತರ ಅನೇಕ ವಿದ್ವಾಂಸರ, ಹಿರಿಯರ ಸಂಪರ್ಕ ಆಶೀರ್ವಾದ ಸಿಗುತ್ತಿದೆ, ಅಮರನಾಥದ ಉದ್ಭವ ಶಿವಲಿಂಗದ ಮುಂದೆ ನಂದಿಯ ವಿಗ್ರಹ ರಚಿಸುವ ಅವಕಾಶ ಸಿಕ್ಕಿದೆ ಇದೆಲ್ಲವೂ ಪುಣ್ಯದ ಕಾರ್ಯ ಎಂದರು.