
ಬೆಳಗಾವಿ : ಈ ವರ್ಷ ಕರ್ನಾಟಕದಾದ್ಯಂತ 518 ಕಡೆ ಆರ್ಎಸ್ಎಸ್ ಕಾರ್ಯಕ್ರಮ, ಪಥಸಂಚಲನ ನಡೆದಿದೆ. ಎಲ್ಲಿಯೂ ಗಲಾಟೆ, ದೊಂಬಿ ಆಗಿಲ್ಲ ಎಂದು ಕಾಂಗ್ರೆಸ್ ಸರ್ಕಾರವೇ ಒಪ್ಪಿಕೊಂಡಿದೆ. ಆರ್ಎಸ್ಎಸ್ ಕಾರ್ಯಕ್ರಮಗಳ ಬಗ್ಗೆ ಅಧಿವೇಶನದಲ್ಲಿ ಬಿಜೆಪಿ ಶಾಸಕ ವಿ.ಸುನೀಲ್ ಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿ ಗೃಹ ಸಚಿವ ಅವರೇ ಡಾ.ಜಿ.ಪರಮೇಶ್ವರ, ಕರ್ನಾಟಕದಾದ್ಯಂತ ಒಟ್ಟು 518 ಕಡೆಗಳಲ್ಲಿ ಆರ್ಎಸ್ಎಸ್ ಪಥ ಸಂಚಲನ ನಡೆದಿದೆ. ಅಂದಾಜು 2 ಲಕ್ಷಕ್ಕೂ ಅಧಿಕ ಸ್ವಯಂ ಸೇವಕರು ಪಾಲ್ಗೊಂಡಿದ್ದರು. ಯಾವುದೇ ಗಲಾಟೆ, ದೊಂಬಿ ಅಥವಾ ಕೋಮು ಗಲಭೆಗಳು ನಡೆದಿಲ್ಲ ಎಂದು ಲಿಖಿತವಾಗಿ ತಿಳಿಸಿದ್ದಾರೆ.



ಕಲಬುರಗಿಯ ಚಿತ್ತಾಪುರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಚಿತಾವಣೆಯಿಂದ ಆರ್ಎಸ್ಎಸ್ ಪಥಸಂಚಲನಕ್ಕೆ ಅನುಮತಿ ನಿರಾಕರಿಸುವಾಗ ಕಲಬುರಗಿ ಜಿಲ್ಲಾಡಳಿತ ಕಾನೂನು ಸುವ್ಯವಸ್ಥೆಯ ಕಾರಣ ನೀಡಿತ್ತು. ಆದರೆ ಇಡೀ ರಾಜ್ಯದಲ್ಲೇ ಆರ್ಎಸ್ಎಸ್ ಕಾರ್ಯಕ್ರಮಗಳಿಂದಾಗಿ ಕಾನೂನು ಸುವ್ಯವಸ್ಥೆಯ ಸಮಸ್ಯೆ ಉದ್ಭವಿಸಿಲ್ಲ ಎಂದು ಖುದ್ದು ಸರ್ಕಾರವೇ ಈಗ ಅಧಿವೇಶನದಲ್ಲೇ ಒಪ್ಪಿಕೊಂಡಂತಾಗಿದೆ.
ಸರ್ಕಾರಕ್ಕೆ ಸಂಬಂಧಿಸಿದ ಸ್ಥಳಗಳಲ್ಲಿ ಆರ್ಎಸ್ಎಸ್ ಕಾರ್ಯಕ್ರಮ ಹಾಗೂ ಪಥಸಂಚಲನಕ್ಕೆ ಅವಕಾಶ ನೀಡಬಾರದು. ಆರ್ಎಸ್ಎಸ್ ಸಂವಿಧಾನ ವಿರೋಧಿ ಚಟುವಟಿಕೆ ಮಾಡುತ್ತದೆ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿ ಅನೇಕ ಕಾಂಗ್ರೆಸ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅದರಲ್ಲೂ, ಪ್ರಿಯಾಂಕ್ ಖರ್ಗೆ ತವರು ಜಿಲ್ಲೆ ಕಲಬುರಗಿಯ ಚಿತ್ತಾಪುರದಲ್ಲಿ ಆರ್ಎಸ್ಎಸ್ ಪಥಸಂಚಲನಕ್ಕೆ ಅವಕಾಶ ನೀಡುವ ವಿಚಾರ ಕೋರ್ಟ್ ಮೆಟ್ಟಿಲೇರಿ, ಕೊನೆಗೂ ಪಥಸಂಚಲನ ನಡೆದಿದ್ದು ಈಗ ಇತಿಹಾಸ.

ವಿಶೇಷವೆಂದರೆ, ಗೃಹ ಸಚಿವರ ಉತ್ತರ ಪ್ರಕಾರ ಪ್ರಿಯಾಂಕ್ ಖರ್ಗೆ ತವರು ಜಿಲ್ಲೆ ಕಲಬುರಗಿಯಲ್ಲೇ ಎರಡನೇ ಅತಿ ಹೆಚ್ಚು (51) ಪಥ ಸಂಚಲನಗಳು ನಡೆದಿವೆ. 6ರಿಂದ 7 ಸಾವಿರ ಸ್ವಯಂಸೇವಕರು ಪಾಲ್ಗೊಂಡಿದ್ದಾರೆ. ಅತಿ ಹೆಚ್ಚು (97) ಪಥಸಂಚಲನಗಳು ಬೆಂಗಳೂರು ನಗರದಲ್ಲಿ ನಡೆದಿವೆ. 27 ರಿಂದ 30 ಸಾವಿರ ಸ್ವಯಂಸೇವಕರು ಪಾಲ್ಗೊಂಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ 45 ಪಥಸಂಚಲನಗಳು, ಬಾಗಲಕೋಟೆ ಜಿಲ್ಲೆಯಲ್ಲಿ 33 ಪಥಸಂಚಲನಗಳು, ಬೀದರ್ ಜಿಲ್ಲೆಯಲ್ಲಿ 41 ಪಥಸಂಚಲನಗಳು, ಶಿವಮೊಗ್ಗ ಜಿಲ್ಲೆಯಲ್ಲಿ 19 ಪಥಸಂಚಲನಗಳು, ವಿಜಯಪುರ ಜಿಲ್ಲೆಯಲ್ಲಿ 18 ಪಥಸಂಚಲನಗಳು ನಡೆದಿವೆ. ಬೆಳಗಾವಿಯಲ್ಲಿ 17, ತುಮಕೂರು ಜಿಲ್ಲೆಯಲ್ಲಿ 11, ಚಿತ್ರದುರ್ಗ ಜಿಲ್ಲೆಯಲ್ಲಿ 11, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10, ಉಡುಪಿ ಜಿಲ್ಲೆಯಲ್ಲಿ 10, ಚಿಕ್ಕಗಳೂರು ಜಿಲ್ಲೆಯಲ್ಲಿ 11, ಯಾದಗಿರಿ ಜಿಲ್ಲೆಯಲ್ಲಿ 12, ರಾಯಚೂರು ಜಿಲ್ಲೆಯಲ್ಲಿ 10 ಪಥಸಂಚಲನಗಳು ನಡೆದಿವೆ ಎಂದು ಸರ್ಕಾರ ಮಾಹಿತಿ ನೀಡಿದೆ.

