
ಮಂಗಳೂರು: ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರೋಡ್ ನಿಲ್ದಾಣಗಳ ನಡುವಿನ ಹಳಿ ವಿದ್ಯುದೀಕರಣ ಯೋಜನೆ ಪೂರ್ಣಗೊಂಡಿದ್ದು, ಈ ಮೂಲಕ ರೈಲ್ವೇ ಪ್ರಯಾಣಿಕರಿಗೆ ಇದೀಗ ಸಿಹಿ ಸುದ್ದಿ ಸಿಕ್ಕಂತಾಗಿದೆ.


ಹೌದು, ಸೆಪ್ಟೆಂಬರ್ 15ರಿಂದ ರೈಲುಗಳು ವಿದ್ಯುತ್ ಚಾಲಿತ ಎಂಜಿನ್ ಮೂಲಕ ಸಂಚರಿಸಲಿದೆ. ಸೆ. 10ರಂದು ವಿದ್ಯುತ್ ಚಾಲಿತ ಎಂಜಿನ್ ಮಂಗಳೂರು-ಸುಬ್ರಹ್ಮಣ್ಯ ರೋಡ್ ನಡುವೆ ಯಶಸ್ವಿ ಸಂಚಾರ ನಡೆಸಿದೆ. ಬೆಳಗ್ಗೆ ಮಧ್ಯಾಹ್ನ ಹಾಗೂ ರಾತ್ರಿ ಸಮಯದ ಎರಡೂ ಬದಿಯ, ಮೂರು ಹೊತ್ತಿನ ರೈಲುಗಳೂ ಕೂಡಾ ವಿದ್ಯುದೀಕರಣ ಆಗಲಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು-ಮಂಗಳೂರು ವಂದೇ ಭಾರತ್ ಆರಂಭವಾದರೂ ಎಲೆಕ್ಟ್ರಿಕ್ ಮಾರ್ಗ ಸಹಕಾರಿಯಾಗಲಿದೆ. ಕಳೆದ ಜೂನ್ನಿಂದ ಸುಬ್ರಹ್ಮಣ್ಯ ರೋಡ್-ಎಡಕುಮೇರಿ- ಹಾಸನ ನಡುವಿನ ಹಳಿ ವಿದ್ಯುದೀಕರಣ ಕಾಮಗಾರಿ ನಡೆಯುತ್ತಿದ್ದು, ಇದು ಪೂರ್ಣಗೊಂಡ ಬಳಿಕ ಮಂಗಳೂರು-ಬೆಂಗಳೂರು ರೈಲುಗಳು ಕೂಡಾ ವಿದ್ಯುತ್ ಚಾಲಿತ ಸಂಚಾರ ನಡೆಸಲಿವೆ. ಇದನ್ನೂ ಓದಿ: ಬಂಟ್ವಾಳ: ರೈಲು ನಿಲ್ದಾಣಕ್ಕೆ ಕೋಟ್ಯಾಂತರ ರೂ. ವೆಚ್ಚದಲ್ಲಿ ಹೊಸ ಸ್ಪರ್ಶ ಮುಂಜಾನೆ ಮಂಗಳೂರು ಸೆಂಟ್ರಲ್ನಿಂದ ಹೊರಟು ಸುಬ್ರಹ್ಮಣ್ಯ ರೋಡ್ ತಲುಪುವ ಪ್ಯಾಸೆಂಜರ್ ರೈಲು ಅಲ್ಲಿಂದ ಮರಳಿ ಮಂಗಳೂರು ತಲುಪುತ್ತಿದೆ. ಇದೇ ರೈಲು ಸಂಜೆಯೂ ಇದೇ ರೀತಿ ಮಂಗಳೂರಿನಿಂದ ಸುಬ್ರಹ್ಮಣ್ಯ ರೋಡ್ ನಿಲ್ದಾಣಕ್ಕೆ ಬಂದು ರಾತ್ರಿ ಮಂಗಳೂರಿಗೆ ನಿರ್ಗಮಿಸುತ್ತದೆ. ಇವೆರಡು ಸೇವೆಗಳಲ್ಲದೆ ಮಧ್ಯಾಹ್ನವೂ ಮಂಗಳೂರು ಸೆಂಟ್ರಲ್- ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ರೈಲು ಸೇವೆಯಿದೆ.