
ಮಂಗಳೂರು: ಶಕ್ತಿನಗರದ ನಾಲ್ಯಪದವು ಪಿ.ಎಂ. ಶ್ರೀ ಕುವೆಂಪು ಶತಮಾನೋತ್ಸವ ಉನ್ನತೀಕರಿಸಿದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನವು ಶಾಲೆಯ ನೂತನ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.



ವಿದ್ಯಾದೀವಿಗೆ ಎಜುಕೇಷನಲ್ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷ ದೇವಾನಂದ ದೀಪ ಪ್ರಜ್ವಲಸಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿ “ಶಾಲೆಯಲ್ಲಿ ಹಲವಾರು ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಾ ಬಂದಿದೆ. ಪ್ರತಿಯೊಂದು ಯೋಜನೆಗಳನ್ನು ನವೀಕರಿಸುತ್ತಲೇ ಇರಬೇಕಾಗುತ್ತದೆ. ಶಾಲಾ ಅಭಿವೃದ್ಧಿ ಸಮಿತಿ, ವಿದ್ಯಾದೀವಿಗೆ ಎಜುಕೇಷನಲ್ ಚಾರಿಟಬಲ್ ಟ್ರಸ್ಟ್ ಮತ್ತು ಹಳೆ ವಿದ್ಯಾರ್ಥಿ ಸಂಘ ಪ್ರಾರಂಭವಾದ ದಿನಗಳಿಂದಲೂ ಪ್ರತಿಯೊಬ್ಬರೂ ಕೈಜೋಡಿಸುತ್ತಲೇ ಬಂದಿದ್ದಾರೆ, ಇನ್ನೂ ಮುಂದಕ್ಕೂ ಎಲ್ಲರ ಸಹಕಾರ ಬೇಕು ಎಂದು ಹೇಳಿದರು.

ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ಪ್ರಸಕ್ತ ವಿದ್ಯಾರ್ಥಿಗಳು ಹಳೆ ವಿದ್ಯಾರ್ಥಿಗಳನ್ನು ವಿಶೇಷ ರೀತಿಯಲ್ಲಿ ಕಾರ್ಯಕ್ರಮದ ಸಭಾಂಗಣಕ್ಕೆ ಸ್ವಾಗತಿಸಿದರು. ಪ್ರಸ್ತುತ ಶಾಲಾ ವಿದ್ಯಾರ್ಥಿಗಳ ಸ್ವಾಗತ ಭರತನಾಟ್ಯ ನೃತ್ಯದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು. ಶಾಲೆಯ ಸರ್ವತೋಮುಖ ಬೆಳವಣಿಗೆಯನ್ನು ಪ್ರದರ್ಶಿಸುವ “ಕಿರುಚಿತ್ರ ಪ್ರದರ್ಶನ”ವು ಎಲ್ಲರ ಗಮನ ಸೆಳೆಯಿತು. ವಿದ್ಯಾದೇವಿಗೆ ಎಜುಕೇಷನಲ್ ಚಾರಿಟಬಲ್ ಟ್ರಸ್ಟ್ನ ಸಂಚಾಲಕ ಅಶೋಕ್ ನಾಯಕ್ ಪ್ರಾಸ್ತಾವಿಕ ಭಾಷಣ ಮಾಡಿದರು. ಶಾಲೆಯ ಹಿರಿಯ ವಿದ್ಯಾರ್ಥಿ ಶ್ರೀ ರಾಜೇಶ್ ’ಮೋಜಿನ ಆಟ’ದ ಪ್ರಶ್ನೆಗಳ ಮೂಲಕ ಎಲ್ಲರನ್ನು ರಂಜಿಸಿದರು. ಹಿರಿಯ ವಿದ್ಯಾರ್ಥಿಗಳು ತಮ್ಮ ಶಾಲಾ ದಿನಗಳನ್ನು ಹಾಗೂ ತಮ್ಮ ಪ್ರೀತಿಯ ಶಿಕ್ಷಕರನ್ನು ನೆನಪಿಸಿಕೊಂಡು ಭಾವುಕರಾದರು. ಶಾಲಾ ಮುಖ್ಯ ಶಿಕ್ಷಕಿ ಶಾಲೆಯ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಹಿರಿಯ ವಿದ್ಯಾರ್ಥಿಗಳಿಂದ ಶಾಲೆಗೆ ದೇಣಿಗೆ ಸಂಗ್ರಹಿಸುವ ಅಭಿಯಾನವನ್ನು ಆರಂಭಿಸಲಾಯಿತು. ವಿವಿಧತೆಯಲ್ಲಿ ಏಕತೆಯನ್ನು ಸಾರುವ ನೃತ್ಯರೂಪಕವು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ನಂತರ ಹಳೆ ವಿದ್ಯಾರ್ಥಿ ಸಂಘದ ನೂತನ ಪಧಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಕುಶಾಲ್ ಕುಮಾರ್ ಹಾಗೂ ದೇವಾನಂದ, ಅಧ್ಯಕ್ಷರಾಗಿ ರೋನಾಲ್ಡ್ ಟೋನಿ ಪಿಂಟೋ, ಉಪಾಧ್ಯಕ್ಷರಾಗಿ ಮೋಹನ ಮತ್ತು ಶೋಭಾ ಶೆಟ್ಟಿ, ಕಾರ್ಯದರ್ಶಿ ಶಶಿಧರ್ ಶಕ್ತಿನಗರ, ಕೋಶಾಧಿಕಾರಿ ಮನೋಜ್, ಸಂಚಾಲಕರಾಗಿ ಅಶೋಕ್ ನಾಯಕ್, ರಾಜೇಶ್, ದಿನಕರ ಶೆಟ್ಟಿ, ಯಶವಂತ್ ಹಾಗೂ ಇನ್ನಿತರ ಸದಸ್ಯರು ಆಯ್ಕೆಯಾದರು.


ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕಿಶೋರ್ ಜೆ, ಪದವು ಫ್ರೆಂಡ್ಸ್ ಕ್ಲಬಿನ ಲೆಕ್ಕಪರಿಶೋಧಕ ರವೀಂದ್ರ ರೈ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ದಾಕ್ಷಾಯಿಣಿ ಸ್ವಾಗತಿಸಿದರು. ಸಹಶಿಕ್ಷಕಿ ವಿಲಾಸಿನಿ ವಂದಿಸಿದರು. ಶಿಕ್ಷಕಿ ಶ್ವೇತಾ ಕಾರ್ಯಕ್ರಮ ನಿರೂಪಿಸಿದರು.

ವರದಿ : ಧನುಷ್ ಶಕ್ತಿನಗರ

