
ಬಂಟ್ವಾಳ: ವೀಡಿಯೋ ನೋಡಿದರೆ ಹಣ ಸಿಗುತ್ತದೆ ಎಂಬ ಆ್ಯಪ್ವೊಂದರ ಮಾಹಿತಿಯಂತೆ ಕಲ್ಲಡ್ಕ ಕೃಷ್ಣಕೋಡಿಯ ವರುಣ್ ಅವರು ಬ್ಯಾಂಕ್ ಖಾತೆಯಿಂದ 1.12 ಲಕ್ಷ ರೂ. ಕಳೆದುಕೊಂಡಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದ್ದು, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ವರುಣ್ ಮೊಬೈಲ್ಗೆ 2024ರ ನ. 8ರಂದು ವಾಟ್ಸ್ಆ್ಯಪ್ ಮೂಲಕ ಲಿಂಕ್ವೊಂದು ಬಂದಿದ್ದು, ಅದನ್ನು ಒತ್ತಿದಾಗ ಮಾಡಿದಾಗ ಆರ್ಪಿಸಿ ಆ್ಯಪ್ ಓಪನ್ ಆಗಿತ್ತು. ಅದರ ಮೂಲಕ ಅಶಕ್ತರಿಗೆ ನೆರವು ನೀಡಲಾಗುತ್ತದೆ ಎಂಬ ಮಾಹಿತಿ ಇದ್ದು, ಜತೆಗೆ ದಿನಕ್ಕೆ 40 ವೀಡಿಯೋಗಳನ್ನು ನೋಡಿದರೆ 2 ಸಾವಿರ ರೂ. ಸಿಗುತ್ತದೆ ಎನ್ನಲಾಗಿತ್ತು. ಅದಕ್ಕಾಗಿ ವರುಣ್ ತನ್ನ ಬ್ಯಾಂಕ್ ಖಾತೆಯಿಂದ 56 ಸಾವಿರ ರೂ.ಗಳನ್ನು ಅವರು ಹೇಳಿದ ಖಾತೆಗೆ ಜಮಾಯಿಸಿದ್ದರು.
ಬಳಿಕ ನಿತ್ಯವೂ ಅವರು ವೀಡಿಯೋಗಳನ್ನು ವೀಕ್ಷಿಸಿದ್ದು, ಅವರ ಲಿಂಕ್ ಖಾತೆಯಲ್ಲಿ 1 ಲಕ್ಷ ರೂ. ಜಮೆಯಾಗಿತ್ತು. ಅದನ್ನು ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಮತ್ತೆ 56 ಸಾವಿರ ರೂ.ಗಳನ್ನು ಯುಪಿಐ ಮೂಲಕ ಕಳುಹಿಸಬೇಕು ಎಂಬ ಮಾಹಿತಿ ನೀಡಲಾಗಿದ್ದು, ಅದರಂತೆ ವರುಣ್ ಡಿ. 13ರಂದು ಮತ್ತೆ ಬತುಲ ಕಾರ್ತಿಕ್ ಹೆಸರಿನ ಖಾತೆಗೆ ಹಣ ಜಮೆ ಮಾಡಿದ್ದರು. ಬಳಿಕ ಮತ್ತೆ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟಾಗ ಸ್ನೇಹಿತರಲ್ಲಿ ತಿಳಿಸಿದ್ದು, ಆಗ ಅದು ಸೈಬರ್ ವಂಚನೆಯ ಜಾಲ ಎಂದು ತಿಳಿದುಬಂದಿದೆ.

