
ಮಂಗಳೂರು: ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ತಿಮ್ಮಯ್ಯ “ಮಾರ್ಚ 1 ರಂದು ಈ ಸಮಿತಿಯು ಸಭೆ ನಡೆಸಿ, ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಚರ್ಚಿಸಲಿದೆ. ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳಿಗೂ ಹಕ್ಕಿ ಜ್ವರ ಮುನ್ನೆಚ್ಚರಿಕೆ ಕುರಿತು ಸುತ್ತೋಲೆ ಕಳುಹಿಸಲಾಗುವುದು” ಎಂದು ತಿಳಿಸಿದ್ದಾರೆ.
ಕರ್ನಾಟಕದ ಬಳ್ಳಾರಿ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ. ಈ ಹಿನ್ನಲೆ ದ.ಕ. ಜಿಲ್ಲೆಯಲ್ಲೂ ತೀವ್ರ ನಿಗಾ ವಹಿಸಿಕೊಳ್ಳಲು ಪ್ರೇರೆಪಿಸಲು ಪಶುಪಾಲನೆ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಸಮನ್ವಯ ಸಮಿತಿ ರಚಿಸಲಾಗಿದೆ.
ನಿನ್ನೆ (ಫೆ.28) ನಡೆದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಡಾ| ತಿಮ್ಮಯ್ಯ, “ಇತ್ತೀಚೆಗೆ ಹಕ್ಕಿಜ್ವರ ಪ್ರತಿವರ್ಷ ವರದಿಯಾಗುತ್ತಿದೆ. ಮಾಂಸಗಳನ್ನು ಚೆನ್ನಾಗಿ ಬೇಯಿಸಿ ತಿನ್ನುವುದು ಅಗತ್ಯ. ಇದರಿಂದ ಮಾಂಸದಲ್ಲಿರುವ ಸೂಕ್ಷ್ಮಾಣು ಜೀವಿಗಳು ನಾಶವಾಗುತ್ತವೆ ಮತ್ತು ತಿನ್ನಲು ಯೋಗ್ಯವಾಗುತ್ತವೆ. ಸಮನ್ವಯ ಸಮಿತಿ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು” ಎಂದರು



