ಉಳ್ಳಾಲ: ಬಿಲ್ಡರ್‌ಗೆ 86 ಲಕ್ಷ ರೂ ವಂಚನೆ..! ಬ್ಯಾಂಕ್‌ ಮ್ಯಾನೇಜರ್‌ ಸೇರಿ 4 ಜನರ ವಿರುದ್ದ ಪ್ರಕರಣ ದಾಖಲು

0 0
Read Time:4 Minute, 21 Second

ಮಂಗಳೂರು : ಬಿಲ್ಡರ್‌ ಓರ್ವರಿಂದ ರೂ. 86 ಲಕ್ಷ ಹಣವನ್ನು ಪಡೆದು ವಂಚಿಸಿ, ಅವರ ಲೇಔಟ್‌ ವ್ಯವಹಾರಕ್ಕೆ ಅಡ್ಡಿಪಡಿಸಿ, ಜೀವಬೆದರಿಕೆಯೊಡ್ಡಿರುವ ಬ್ಯಾಂಕ್‌ ಮ್ಯಾನೇಜರ್‌ ಸಹಿತ ಬ್ರೋಕರ್‌ , ಸಿವಿಲ್‌ ಗುತ್ತಿಗೆದಾರ ಹಾಗೂ ಅವರ ಸಹಚರನ ವಿರುದ್ಧ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಐಪಿಸಿ 1860 ರ ಅಡಿ ಸೆಕ್ಷನ್‌ 341, 447, 323, 504,506,420, 34 ವಿವಿಧ ಕಾಯಿದೆಗಳಡಿ ಪ್ರಕರಣ ದಾಖಲಾಗಿದೆ.
ರಾಷ್ಟ್ರೀಕೃತ ಬ್ಯಾಂಕೊಂದರ ಮ್ಯಾನೇಜರ್‌ ಜೆಪ್ಪಿನಮೊಗರುವಿನ ಪವನ್‌ ಕುಮಾರ್‌, ಬಾಕಿಮಾರು ನಿವಾಸಿ ಬ್ರೋಕರ್‌ ಆಗಿರುವ ಗುರುರಾಜ್‌, ಸಿವಿಲ್‌ ಗುತ್ತಿಗೆದಾರ ಜಗದೀಶ್‌ ಹಾಗೂ ಅವರ ಸಹಚರ ಜಯಪ್ರಕಾಶ್‌ ಜೆ.ಪಿ ಎಂಬವರುಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಂಗಳೂರು ಮೂಲದ ಬಿಲ್ಡರ್‌ ಲೇಔಟ್‌ ನಿರ್ಮಿಸಿ ಸಾರ್ವಜನಿಕವಾಗಿ ಸೈಟ್‌ ಮಾರಾಟ ಮಾಡಲು ಉದ್ದೇಶಿಸಿದ್ದ ಸಂದರ್ಭ ಬ್ಯಾಂಕ್‌ ಮ್ಯಾನೇಜರ್‌ ಪವನ್‌ ಕುಮಾರ್‌ ಎಂಬಾತ ಉಳ್ಳಾಲದಲ್ಲಿ ಜಮೀನನ್ನು ಕ್ರಯಕ್ಕೆ ಕೊಡಿಸಿದ್ದರು. ಇಲ್ಲಿ 2022ನೇ ಫೆಬ್ರವರಿ ತಿಂಗಳಿನಲ್ಲಿ ನಿವೇಶನಗಳನ್ನು ವಿಂಗಡಿಸಿ ಸಾರ್ವಜನಿಕವಾಗಿ ಮಾರಾಟ ಮಾಡಲು ಕೆಲಸವನ್ನು ಆರಂಭ ಮಾಡಿದ್ದರು. ಈ ಬಗ್ಗೆ ಪವನ್‌ ಕುಮಾರ್‌, ಬಿಲ್ಡರ್‌ ಅವರಲ್ಲಿ ಲೇಔಟ್‌ನ ಡ್ರೈನೇಜ್‌ ,ಇನ್ನಿತರ ದಾಖಲಾತಿಗಳನ್ನು ತಂದು ಕೊಡುವುದಾಗಿ ತಿಳಿಸಿ ಕೆಲಸವನ್ನು ತನಗೆ ಕೊಡಬೇಕೆಂದು ಮಾತುಕತೆ ನಡೆಸಿ ಒಪ್ಪಿಗೆ ಪಡೆದು ಕೆಲಸವನ್ನು ಕ್ರಮಬದ್ಧವಾಗಿ ನಡೆಸುವ ಭರವಸೆಯನ್ನು ನೀಡಿದ್ದರು. ಆದರೆ ಪವನ್‌ ಕುಮಾರ್‌ ಇನ್ನೋರ್ವ ಬಿಲ್ಡರ್‌ ಅವರ ಅರಿವಿಗೆ ಬಾರದಂತೆ ಜಗದೀಶ್‌ ಎಂಬವರಿಗೆ ಉಪಗುತ್ತಿಗೆಯನ್ನು ಕೊಟ್ಟಿದ್ದಾರೆ. ಇದು ಬೆಳಕಿಗೆ ಬರುವ ಹೊತ್ತಿನಲ್ಲಿ ವಿವಿಧ ಕಾಮಗಾರಿಗೆಂದು ಮೆನೇಜರ್‌ ಪವನ್‌ ಕುಮಾರ್ ಅವರು‌ ನಗದು ಮತ್ತು ಆರ್‌ ಟಿ ಜಿಎಸ್‌ ಮುಖಾಂತರ ರೂ. 86 ಲಕ್ಷ ರೂ. ಹಣವನ್ನು ಪಡೆದುಕೊಳ್ಳಲಾಗಿತ್ತು. ಆದರೆ ಕಾಮಗಾರಿ ತೀರಾ ಕಳಪೆಯಾಗಿ ಕಂಡುಬಂದಿದ್ದು, ಇದನ್ನು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಕೆಲಸವನ್ನು ಮಾಡದೇ ಉಪಗುತ್ತಿಗೆ ವಹಿಸಿಕೊಂಡಿದ್ದ ಜಗದೀಶ್‌ ಕಾಮಗಾರಿಯನ್ನು ಅರ್ಧಕ್ಕೇ ಸ್ಥಗಿತಗೊಳಿಸಿದ್ದರು. ಆದ್ದರಿಂದ ಮತ್ತೆ ಕಾಮಗಾರಿಯನ್ನು ಬಿಲ್ಡರ್‌ ಅವರೇ ನಡೆಸಿದ್ದರು. ಈ ನಡುವೆ ಕಾಮಗಾರಿ ಹೆಸರಿನಲ್ಲಿ ಪಡೆದುಕೊಂಡ ಹಣವನ್ನು ವಾಪಸ್ಸು ಕೇಳಿದ ದಿನದಿಂದ ಪವನ್‌ ಕುಮಾರ್‌ ಬಿಲ್ಡರ್‌ ಮೇಲೆ ಸೇಡು ಮತ್ತು ಜಿದ್ದನ್ನು ಇಟ್ಟು ದ್ವೇಷ ಸಾಧಿಸಲು ಮುಂದಾಗಿ ಸೈಟುಗಳು ಮಾರಾಟವಾಗದಂತೆ ಇಲ್ಲಸಲ್ಲದ ಸುಳ್ಳುಗಳನ್ನು ಹೇಳಿಕೊಂಡು ಅಪಪ್ರಚಾರ ನಡೆಸಿದ್ದು, ಜ.11 ರಂದು ಮಧ್ಯಾಹ್ನ3 ಗಂಟೆಗೆ ಪವನ್‌, ಬ್ರೋಕರುಗಳಾದ ಗುರುರಾಜ್‌, ಜಯಪ್ರಕಾಶ್‌ ಸೇರಿಕೊಂಡು ಲೇಔಟ್‌ ಗೆ ನುಗ್ಗಿ ಅಲ್ಲಿ ಕೆಲಸ ಮಾಡುತ್ತಿದ್ದ ದಕ್ಷರಾಜ್‌, ರಾಧಾಕೃಷ್ಣ ಎಂಬವರನ್ನು ತಡೆದುಹಿಡಿದು ಎಳೆದಾಡಿ ಕೆಳಗೆ ಬೀಳಿಸಿ ಮೈಮೇಲೆ ಕಾಲಿನಿಂದ ತುಳಿದು ಹಲ್ಲೆ ನಡೆಸಿರುವುದಲ್ಲದೆ, ಅವಾಚ್ಯವಾಗಿ ನಿಂದಿಸಿ, ಮಾರಕಾಯುಧಗಳಾಗಿ ಪಿಕ್ಕಾಸು, ರಾಡು, ಹಾರೆಯನ್ನು ತೋರಿಸಿ ಬೆದರಿಸಿ , ಜೆಸಿಬಿಯನ್ನು ಕೆಲಸಗಾರರ ಮೇಲೆ ಹತ್ತಿಸಿ ಕೊಲೆ ಮಾಡುವುದಾಗಿ ಜೀವಬೆದರಿಕೆ ಒಡ್ಡಿದ್ದಾರೆ.

ಮ್ಯಾನೇಜರ್‌ ಕಾರವಾರಕ್ಕೆ ವರ್ಗ!
ಬ್ಯಾಂಕ್‌ ಮ್ಯಾನೇಜರ್‌ ಪವನ್‌ ಕುಮಾರ್‌ ಕಾರ್ಕಳದ ರೈಸ್‌ ಆಂಡ್‌ ಕ್ಯಾಷ್ಯು ಸಂಸ್ಥೆ ಉದ್ಯಮಿಯೋರ್ವರ ಅಳಿಯನಾಗಿದ್ದಾರೆ. ಪವನ್‌ ಕುಮಾರ್ ನಗರದ ಸಿಟಿಸೆಂಟರ್‌ ಬಳಿಯ ಬ್ಯಾಂಕಿನಲ್ಲಿ ಕೆಲ ತಿಂಗಳುಗಳ ಹಿಂದೆ ಪ್ರಬಂಧಕರಾಗಿದ್ದರು. ಲೇಔಟ್‌ ಪ್ರಕರಣ ಶಾಖೆಯ ಬೆಳಕಿಗೆ ಬರುತ್ತಿದ್ದಂತೆ ಅಲ್ಲಿಂದ ಕಾರವಾರಕ್ಕೆ ಶಿಕ್ಷಾರ್ಹ ವರ್ಗಾವಣೆ ನಡೆಸಲಾಗಿದೆ. ಇದೀಗ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *