
ಬಂಟ್ವಾಳ: ಪುರಸಭಾ ವ್ಯಾಪ್ತಿಯ ಬಿ ಮೂಡ ಗ್ರಾಮದ ಗೂಡಿನಬಳಿಯ-ಕೈಕುಂಜೆ ಬಳಕ(ಕ್ರಿಶ್ಚಿಯನ್ಸ್ ಕಾಲೋನಿ) ದಲ್ಲಿ ಅಗ್ನಿ ದುರಂತದಿಂದಾಗಿ ಮನೆ ಸಂಪೂರ್ಣ ಭಸ್ಮವಾದ ಘಟನೆ ನಡೆದಿದೆ. ಇಂದು ಬೆಳಗ್ಗೆ ಚಾರ್ಲಿ ಡಿಸೋಜ ಎಂಬವರ ಮನೆಲ್ಲಿ ಈ ಅವಘಡ ನಡೆದಿದ್ದು, ಮನೆಯ ಯಜಮಾನ ಮತ್ತು ಇನ್ನೊಬ್ಬ ಸದಸ್ಯ ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.



ಈ ಪ್ರದೇಶಕ್ಕೆ ಹೋಗುವ ಸಂಪರ್ಕ ರಸ್ತೆಗೆ ರೈಲ್ವೇ ಇಲಾಖೆಯವರು ತಡೆ ಬೇಲಿ ಅಡ್ಡಲಾಗಿ ಹಾಕಿದ್ದ ಕಾರಣ ಅಗ್ನಿ ದುರಂತ ಸಂಭವಿಸಿದ ತಕ್ಷಣ ತುರ್ತು ವಾಹನಗಳು ಘಟನಾ ಸ್ಥಳಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ಇಂದೂ ಕೂಡಾ ದುರಂತ ಸಂಭವಿಸಿದ ಸ್ಥಳಕ್ಕೆ ಸರಿಯಾದ ಸಮಯಕ್ಕೆ ಅಗ್ನಿಶಾಮಕ ದಳದ ವಾಹನ ಮತ್ತು ಆ್ಯಂಬುಲೆನ್ಸ್ ಬಾರದೇ ಗಾಯಾಳುಗಳು ಮತ್ತು ಸ್ಥಳೀಯರು ಗಂಟೆಗಳ ಕಾಲ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ನಂತರ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ಬೆಂಕಿ ನಂದಿಸಿದ ಬಳಿಕ ಗಂಭೀರ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಿದರು.
ಈ ಪ್ರದೇಶದಲ್ಲಿ ಹಿಂದೂ ರುದ್ರಭೂಮಿ, ಚರ್ಚ್ ಮತ್ತು ಹಲವಾರು ವಾಸದ ಮನೆಗಳಿದ್ದರೂ ಹೋಗಲು ಸರಿಯಾದ ರಸ್ತೆ ಇಲ್ಲದಾಗಿದೆ. ಹಾಗೂ ಈ ಪ್ರದೇಶಕ್ಕೆ ರಸ್ತೆ ನಿರ್ಮಾಣ ಮಾಡಲು ಇಲ್ಲಿನ ನಿವಾಸಿಗಳು ಹಲವಾರು ವರ್ಷಗಳಿಂದ ಸ್ಥಳೀಯ ಶಾಸಕರಿಗೆ ಮತ್ತು ಜಿಲ್ಲೆಯ ಸಂಸದರಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ರೀತಿಯಲ್ಲೂ ಸ್ಪಂದಿಸಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಸ್ಥಳೀಯ ಶಾಸಕರು ಮತ್ತು ಸಂಸದರು ಎಚ್ಚೆತ್ತುಕೊಂಡು ದ್ವೀಪದಂತಾಗಿರುವ ಕೈಕುಂಜೆ ಬಳಕ ಪ್ರದೇಶಕ್ಕೆ ರಸ್ತೆ ನಿರ್ಮಾಣ ಮಾಡಿಸಬೇಕಾಗಿ ಜನ ಒತ್ತಾಯಿಸಿದ್ದಾರೆ.



