
ಧರ್ಮಸ್ಥಳ : ಬುರುಡೆ ಪ್ರಕರಣದ ಪ್ರಮುಖ ಆರೋಪಿ ಚಿನ್ನಯ್ಯನನ್ನು ಎಸ್ಐಟಿ ಇಂದು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಿದೆ. ಈ ನಡುವೆ ಚಿನ್ನಯ್ಯ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ನಡುವೆ ತಿಮರೋಡಿ ಮನೆಯಲ್ಲೇ ನಡೆದಿದೆ ಎನ್ನಲಾದ ಮಾತುಕತೆಯ ವಿಡಿಯೋಗಳನ್ನು ಸರಣಿಯಾಗಿ ಬುರುಡೆ ಗ್ಯಾಂಗ್ ಬಿಡುಗಡೆ ಮಾಡಿ ಪ್ರಕರಣಕ್ಕೆ ತಿರುವು ನೀಡಲು ಯತ್ನಿಸುತ್ತಿದೆ. ಈ ವಿಡಿಯೋಗಳ ಸಂಖ್ಯೆ ಎಂಟಕ್ಕೆ ತಲುಪಿದ್ದು, ಇದರ ನಡುವೆ ಇಂದು ನ್ಯಾಯಾಲಯಕ್ಕೆ ಚಿನ್ನಯ್ಯನನ್ನು ಕರೆತರಲಾಗುತ್ತಿದೆ.


ಈ ನಡುವೆ ಮಹೇಶ್ ಶೆಟ್ಟಿ ತಿಮರೋಡಿಗೆ ಪೊಲೀಸರು ಮೂರನೇ ನೋಟಿಸ್ ಸರ್ವ್ ಮಾಡಲು ಸಿದ್ಧತೆ ನಡೆಸಿದ್ದಾರೆ. ನಿರೀಕ್ಷಣಾ ಜಾಮೀನಿಗಾಗಿ ತಿಮರೋಡಿ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ.
ಧರ್ಮಸ್ಥಳದ ಬುರುಡೆ ಗ್ಯಾಂಗ್ನ ಎಸ್ಐಟಿ ತನಿಖೆ ತುಸು ನಿಧಾನ ಸಾಗುತ್ತಿದೆ. ಸಮಗ್ರ ಮಾಹಿತಿಗಳನ್ನು ಕಲೆ ಹಾಕುತ್ತಿರುವ ಪೊಲೀಸರು, ಬುರುಡೆ ಚಿನ್ನಯ್ಯನನ್ನು ಮತ್ತೆ ಕೋರ್ಟ್ಗೆ ಇಂದು ಹಾಜರುಪಡಿಸಲಿದ್ದಾರೆ. ಹೆಚ್ಚುವರಿ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ದಾಖಲಿಸುವ ಕಾರ್ಯ ನಡೆಯಲಿದೆ. ಶಿವಮೊಗ್ಗ ಜೈಲಿನಲ್ಲಿರುವ ಚಿನ್ನಯ್ಯನನ್ನು ಈಗಾಗಲೇ ಒಂದು ಬಾರಿ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಲು ಕರೆ ತಂದಿದ್ದು, ಇಂದು ಹೇಳಿಕೆ ದಾಖಲಿಸಲು ನ್ಯಾಯಾಧೀಶರು ಅನುಮತಿ ನೀಡಿದ್ದರು. ಹೀಗಾಗಿ ಮತ್ತೆ ಶಿವಮೊಗ್ಗ ಜೈಲಿನಿಂದ ಚಿನ್ನಯ್ಯ ನನ್ನು ಕರೆ ತಂದು ಬೆಳ್ತಂಗಡಿ ಕೋರ್ಟ್ಗೆ ಹಾಜರುಪಡಿಸಲಿದ್ದಾರೆ.


ಕೇಸ್ ಸಿಐಡಿಗೆ?

ಬಂಗ್ಲೆಗುಡ್ಡ ತಲೆಬುರುಡೆ, ಮೂಳೆಗಳು ಪತ್ತೆ ಕೇಸ್ ಎಸ್ಐಟಿ ತನಿಖೆ ಬದಲು ಸಿಐಡಿ ತನಿಖೆಗೆ ಹಸ್ತಾಂತರಿಸಲು ಸರ್ಕಾರ ಪ್ಲ್ಯಾನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಗುರುವಾರ ರಾಜ್ಯ ಸರ್ಕಾರದಿಂದ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. ಶವಗಳ ಹೂತಿಟ್ಟ ಪ್ರಕರಣಗಳು ಮಾತ್ರ ಎಸ್ಐಟಿ ತನಿಖೆ ವ್ಯಾಪ್ತಿಯಲ್ಲಿ ಇರಲಿದೆ. ಕ್ರಿಮಿನಲ್ ಪಿತೂರಿ ನಡೆದಿರುವ ಬಗ್ಗೆ ಸರ್ಕಾರಕ್ಕೆ ಮೌಖಿಕ ವರದಿ ಕೊಟ್ಟಿದೆ ಎನ್ನಲಾಗಿದೆ. ಎಸ್ಐಟಿ ಮಾಹಿತಿ ಮೇರೆಗೆ ಉಳಿದ ತನಿಖೆಯನ್ನ ಸಿಐಡಿಗೆ ವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ತಪಾಸಣೆ ನಡೆಸಿದಾಗ ಪೊಲೀಸರು ತಲ್ವಾರ್ ಬಂದೂಕು ಸೇರಿದಂತೆ ಹಲವಾರು ವಸ್ತುಗಳು ಸಿಕ್ಕಿದ್ದವು. ಈ ವಿಚಾರಣೆಗೆ ಈಗಾಗಲೇ ಎರಡು ಬಾರಿ ನೋಟಿಸನ್ನು ಕೊಡಲಾಗಿದೆ. ಎರಡು ನೋಟಿಸ್ಗೆ ಕ್ಯಾರೇ ಎನ್ನದ ತಿಮರೋಡಿ ಬೇಲ್ಗಾಗಿ ಕೋರ್ಟ್ ಮೊರೆ ಹೋಗಿದ್ದಾರೆ. ಈ ನಡುವೆ ಪೊಲೀಸರು 3ನೇ ನೋಟಿಸ್ ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಮೂರನೇ ನೋಟಿಸ್ಗೆ ಉತ್ತರಿಸದಿದ್ದರೆ ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ಬಂಧನವಾಗುವ ಸಾಧ್ಯತೆ ಇದೆ.
ಬುರುಡೆ ವಿಚಾರಕ್ಕೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿಯ ವಿಚಾರಣೆ ನಡೆದಿಲ್ಲ. ಬುರುಡೆ ಗ್ಯಾಂಗ್ನಲ್ಲಿ ತಾನಿಲ್ಲ ಎಂದು ಬಿಂಬಿಸಲು ಹೊರಟಿರುವ ಮಹೇಶ್ ಶೆಟ್ಟಿ ಈಗಾಗಲೇ ಸಾಲು ಸಾಲು ವೀಡಿಯೋಗಳನ್ನು ಹರಿಬಿಟ್ಟಿದ್ದಾರೆ.