
ಬಂಟ್ವಾಳ: ಇಲ್ಲಿಗೆ ಸಮೀಪದ ವಗ್ಗ ಬಳಿಯ ಬಾಂಬಿಲ ಎಂಬಲ್ಲಿ ಕಾರು ಮತ್ತು ರಿಕ್ಷಾ ನಡುವೆ ನಡೆದ ಅಪಘಾತದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇನ್ನುಳಿದಂತೆ ರಿಕ್ಷಾದಲ್ಲಿ ಮಕ್ಕಳು ಸಹಿತ 8 ಮಂದಿ ಗಾಯಗೊಂಡಿದ್ದಾರೆ.



ಅಪಘಾತದಲ್ಲಿ ಪಂಜಿಕಲ್ಲು ಬಾಂದೊಟ್ಟು ರೆಚ್ಚಾಡಿ ಹರೀಶ್ ಎಂಬವರ ಪತ್ನಿ ತಿಲಕ (40) ಅವರು ಮೃತಪಟ್ಟಿದ್ದಾರೆ.
ರಿಕ್ಷಾದಲ್ಲಿದ್ದ ಯಶಸ್ವಿನಿ, ಗೀತಾ , ರೇವತಿ, ಸರಸ್ವತಿ, ವೇದಾವತಿ, ರಾಜೀವಿ ಮತ್ತು ಮಕ್ಕಳಾದ ದಿಗಂತ್ ಹಾಗೂ ದಿಶಾನಿ ಅವರು ಗಾಯಗೊಂಡಿದ್ದಾರೆ.ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳೂರಿನಿಂದ ಪುಂಜಾಲಕಟ್ಟೆ ಕಡೆಗೆ ಬರುತ್ತಿದ್ದ ರಿಟ್ಜ್ ಕಾರು ಹಾಗೂ ಆಪೆ ರಿಕ್ಷಾ ನಡುವೆ ಅಪಘಾತ ಸಂಭವಿಸಿದೆ.
ಮದ್ವದಲ್ಲಿ ನಡೆದ ಸಂಬಂಧಿಕರ ಮನೆಗೆ ಸೀಮಂತ ಕಾರ್ಯಕ್ರಮಕ್ಕೆ ಹೋಗಿ ವಾಪಸು ಮನೆಗೆ ಬರುತ್ತಿರುವ ಸಮಯ ಬಾಂಬಿಲದಲ್ಲಿ ಅಪಘಾತ ಸಂಭವಿಸಿದೆ. ತಿಲಕ ಅವರ ಜೊತೆ ಸಂಬಂಧಿಕರು ಪಂಜಿಕಲ್ಲುವಿನಿಂದ ನಾರಾಯಣ ಪೂಜಾರಿ ಎಂಬವರ ರಿಕ್ಷಾವನ್ನು ಬಾಡಿಗೆ ಮಾಡಿಕೊಂಡು ಹೋಗಿದ್ದರು. ರಿಕ್ಷಾದಲ್ಲಿದ್ದ ಎಲ್ಲರೂ ಕೂಡ ಸೀಮಂತ ಕಾರ್ಯಕ್ರಮ ಮುಗಿಸಿ ವಾಪಾಸು ಬರುತ್ತಿದ್ದರು ಎನ್ನಲಾಗಿದೆ.
ತಿಲಕ ಸ್ಥಳದಲ್ಲಿಯೇ ಮೃತಪಟ್ಟರೆ ಉಳಿದವರಿಗೆ ಗಂಭೀರವಾಗಿ ಗಾಯವಾಗಿದೆ ಎನ್ನಲಾಗಿದೆ.


ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳ ಬಗ್ಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಆಸ್ಪತ್ರೆಯ ವೈದ್ಯಾಧಿಕಾರಿಗಳ ಬಳಿ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಅಪಘಾತದಲ್ಲಿ ಮೃತರಾದ ತಿಲಕ ಅವರ ಮೃತದೇಹ ಇರಿಸಲಾದ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಪಂಜಿಕಲ್ಲು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ, ಲಕ್ಮೀನಾರಾಯಣ ಗೌಡ, ಮೋಹನ್ ದಾಸ ಪೂಜಾರಿ, ಪ್ರವೀಣ್, ಕರುಣೇಂದ್ರ ಪೂಜಾರಿ, ಪ್ರಕಾಶ್ ಅಂಚನ್ ಮೊದಲಾದವರು ಉಪಸ್ಥಿತರಿದ್ದರು.
ಘಟನೆಯ ಕುರಿತು ಪಾಣೆಮಂಗಳೂರು ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


