
ಪುತ್ತೂರು: ಲಕ್ಷಾಂತರ ಮೌಲ್ಯದ ಕಾಫಿ ಚೀಲಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ನಗರ ಪೊಲೀಸ್ ಠಾಣಾ ಪೊಲೀಸರು ಐವರನ್ನು ಬಂಧಿಸಿದ್ದು, ಲಕ್ಷಾಂತರ ಮೌಲ್ಯದ ಕಾಫಿ ಚೀಲಗಳನ್ನು ವಶಕ್ಕೆ ಪಡೆದಿದ್ದಾರೆ.



ಪ್ರಮುಖ ಆರೋಪಿ ಆಶ್ಲೇಷ ಭಟ್, ಈತನ ಸಹಚರರಾದ ನಾರಾಯಣ ಶೆಟ್ಟಿಗಾರ್, ಮಿಥುನ್ ಕುಮಾರ್, ವಿಜಯ ಶೆಟ್ಟಿ ಹಾಗೂ ಮಹಮ್ಮದ್ ಅಶ್ರಫ್ ಬಂಧಿತ ಆರೋಪಿಗಳು. ಕಬಕ ನಿವಾಸಿ ತೃತೇಶ್ (29) ಅವರ ದೂರಿನಂತೆ, ಲಾರಿ ಮಾಲಕ-ಚಾಲಕರಾದ ಅವರು, ಡಿ.3ರಂದು ಪಿರಿಯಪಟ್ಟಣದ ಕಾಫಿ ಕ್ಯೂರಿಂಗ್ ಕಂಪೆನಿಯಿಂದ ತಲಾ 60 ಕೆಜಿ ತೂಕದ 320 ಕಾಫಿ ಚೀಲಗಳನ್ನು ಮಂಗಳೂರಿಗೆ ಸಾಗಿಸಲು ಲೋಡ್ ಮಾಡಿಕೊಂಡಿದ್ದರು. ರಾತ್ರಿ ಪುತ್ತೂರಿಗೆ ತಲುಪಿದ ಅವರು ಕಬಕ ನೆಹರೂ ನಗರದಲ್ಲಿ ಲಾರಿಯನ್ನು ಬದಿಯಲ್ಲಿ ನಿಲ್ಲಿಸಿ, ಡೋರ್ ಲಾಕ್ ಹಾಕಿ ಮನೆಗೆ ತೆರಳಿದರು.
ಮರುದಿನ 04-12-2025 ರಂದು ಬೆಳಿಗ್ಗೆ ಲಾರಿಯನ್ನು ಚಲಾಯಿಸಿ ಮಂಗಳೂರಿನ ಬಂದರಿಗೆ ತಲುಪಿದಾಗ, ಕಂಪೆನಿಯವರು ಕ್ವಾಲಿಟಿ ಚೆಕ್ಗೆ ಬಂದ ಸಂದರ್ಭದಲ್ಲಿ ಹಿಂಬದಿ ಸೀಲ್ ಲಾಕ್ ಮುರಿದಿರುವುದು ಗಮನಕ್ಕೆ ಬಂತು. ಪರಿಶೀಲಿಸಿದಾಗ, ಸುಮಾರು ₹21,44,000 ಮೌಲ್ಯದ 80 ಕಾಫಿ ಚೀಲಗಳು ಕಾಣೆಯಾದಿರುವುದು ದೃಢಪಟ್ಟಿತು. ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 120/2025, ಕಲಂ 303(2) ಬಿ.ಎನ್.ಎಸ್. 2023ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯ ವೇಳೆ ಅಶ್ಲೇಷ್ ಭಟ್ ತಂಡದ ಕೃತ್ಯ ಬಯಲಾಗಿದೆ. ಪೊಲೀಸರು ಎಲ್ಲಾ ಆರೋಪಿಗಳನ್ನು ವಶಕ್ಕೆ ಪಡೆದು, ಕೃತ್ಯಕ್ಕೆ ಬಳಸಿದ ಎರಡು ಆಟೋಗಳು, ಒಂದು ಗೂಡ್ಸ್ ಟೆಂಪೋ, ಜೊತೆಗೆ ಕಳವಾದ 80 ಕಾಫಿ ಚೀಲಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.


