
ಬೆಳ್ತಂಗಡಿ : ಕಾರು ಹಾಗೂ ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತದಲ್ಲಿ ಸ್ಕೂಟರ್ ಸವಾರೆ ಓರ್ವರು ಸಾವನ್ನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ಕಾವಳಕಟ್ಟೆ ಎಂಬಲ್ಲಿ ಸಂಭವಿಸಿದೆ.


ಸ್ಕೂಟರ್ ಸವಾರೆ, ಕಡಬ ನಿವಾಸಿ ಸುನಿಲ್ ಎಂಬವರ ಪುತ್ರಿ ಅನನ್ಯಾ (21) ಮೃತಪಟ್ಟವರು.
ಸ್ಕೂಟರ್ನ ಇನ್ನೋರ್ವ ಸವಾರೆ, ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆ ನಿವಾಸಿ ಪ್ರಣಮ್ಯ ಸ್ಟುಡಿಯೋ ಮಾಲಕರ ಪುತ್ರಿ ಪೃಥ್ವಿ ರಾವ್ ಗಂಭೀರ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಇಬ್ಬರೂ ಮಂಗಳೂರು ಕಾಲೇಜಿನ ಇಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿನಿಯರೆಂದು ತಿಳಿದು ಬಂದಿದೆ.

ಬಂಟ್ವಾಳ- ಬೆಳ್ತಂಗಡಿ ರಾಷ್ಟೀಯ ಹೆದ್ದಾರಿಯಲ್ಲಿ ಕಾವಳಕಟ್ಟೆಯಿಂದ ಎನ್.ಸಿ.ರೋಡ್ಗೆ ಸಾಗುವ ದಾರಿಯಲ್ಲಿ ತಿರುವೊಂದಿದ್ದು, ತೀರಾ ಅಪಾಯಕಾರಿಯಾಗಿದ್ದು ಇಲ್ಲಿ ಅನೇಕ ಅಪಘಾತಗಳು ಸಂಭವಿಸಿವೆ.
ಇಬ್ಬರೂ ಬೆಳ್ತಂಗಡಿಯಿಂದ ಕಾಲೇಜಿಗೆ ಹೋಗುವ ವೇಳೆ ಈ ತಿರುವಿನಲ್ಲಿ ವ್ಯಾಗನಾರ್ ಕಾರು ಮತ್ತು ಹೊಂಡಾ ಆಕ್ಟಿವ್ ಮಧ್ಯೆ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಪುಂಜಾಲಕಟ್ಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

